Friday, May 29, 2009

ಜಡೆಯಲ್ಲಿ ಜಿನುಗುವ ಗಂಗೆ


ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ನನ್ನಲ್ಲಿ ವಿಶೇಷ ಜಿಜ್ಞಾಸೆ ಮೂಡಿಸಿದೆ.

ಕಾಲಕಾಲೇಶ್ವರ ಗ್ರಾಮದ ತಪ್ಪಲಿನಲ್ಲಿರುವ ಕಾಲಕಾಲೇಶ್ವರ ಬೆಟ್ಟದಲ್ಲಿ ಶ್ರೀ ಕಾಲಕಾಲೇಶ್ವರನ ಸನ್ನಿಧಾನವಿದೆ. ಇಲ್ಲಿ ಶಿವನ ಜಡೆಗಳು ಜೋತು ಬಿದ್ದಂತೆ ಆಲ ಮತ್ತು ಅರಳೆ ಬೇರುಗಳಿಂದ ಗಂಗೆಯ ಅವತರಣವಾದಂತೆ ನೀರು ಜಿನುಗುತ್ತದೆ. ಈ ಬೇರುಗಳ ಮುಖಾಂತರ ಬೀಳುತ್ತಿರುವ ನೀರನ್ನು ನೋಡಿದಾಗ ಸಾಕ್ಷಾತ್ ಗಂಗೆಯೇ ಶಿವನ ಜಡೆಯಿಂದ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಈ ಹಸಿರು ಸೊಬಗಿನ ಬೆಟ್ಟಕ್ಕೆ ಭೇಟಿ ನೀಡುವ ಆಸ್ತಿಕರಿಗೆ ವಿಶೇಷ ಅನುಭವ ನೀಡುತ್ತದೆ. ಮೇಲ್ಭಾಗದ ಪಡಿಯಿಂದ ಬೀಳುವ ತುಂತುರು ನೀರ ಹನಿಗಳು ನೋಡುಗರ ಮುಖಕ್ಕೆ ಮುತ್ತಿಟ್ಟು ಮಾಯವಾಗುತ್ತವೆ.ನಿಸರ್ಗ ಪ್ರೇಮಿಗಳಿಗೆ ಸ್ವರ್ಗ ಸುಖ ನೀಡುವ ಮನೋರಂಜನೀಯವಾದ ಈ ಗಂಗೆ ಗುಪ್ತಗಾಕಾಲಕಾಲೇಶ್ವರ ಕ್ಷೇತ್ರದ ಹಿರಿಮೆಗೆ ತನ್ನ ಕೊಡುಗೆ ನೀಡುತ್ತಿದ್ದಾಳೆ. ಬೆಟ್ಟದ ಮೇಲೆ ಕೆರೆ ಭಾವಿಗಳೇನೂ ಇಲ್ಲ. ಆದರೂ ವರ್ಷದ ೧೨ ತಿಂಗಳೂ ಸದಾ ಬೆಟ್ಟದ ಮೇಲಿಂದ ನೀರು ಜಿನುಗುತ್ತಲೇ ಇರುತ್ತದೆ. ಈ ನೀರು ಎಲ್ಲಿಂದ ಬರುತ್ತದೆಯೋ ಅದು ಜಿಜ್ಞಾಸೆಯ ವಿಷಯ. ಮಳೆಗಾಲದಲ್ಲಿ ಈ ನೀರು ರಭಸವಾಗಿ ಬೀಳುತ್ತದೆ. ಬೇಸಿಗೆಯಲ್ಲಿ ಈ ಜಲಧಾರೆ ತುಂತುರು ನೀರ ಹನಿಗಳಾಗಿ ಪರಿವರ್ತಿತಗೊಳ್ಳುತ್ತವೆ. ಈ ಸೃಷ್ಟಿ ಸೊಬಗಿನ ನಾಡಿನಲ್ಲಿ ಈ ಗಂಗೆ ಸಣ್ಣ ಜಲಪಾತದಂತೆ ಮನ ಸೆಳೆಯುತ್ತಾಳೆ. ಬೆಟ್ಟದ ಶಿಖರದಲ್ಲಿ ಪಾರಿವಾಳಗಳ ಸಂಕುಲ ಸಹ ಈ ಸೊಬಗನ್ನು ಇಮ್ಮಡಿಸುವಂತೆ ಮಾಡಿದೆ.

ಶ್ರೀ ಕಾಲಕಾಲೇಶ್ವರ ದೇವಸ್ಥಾನದ ಪೂಜಾರಿ ಮಲ್ಲಯ್ಯಸ್ವಾಮಿ ಅವರು ಹೇಳುವಂತೆ, ದೇವಸ್ಥಾನದ ಎಡ ಭಾಗದಲ್ಲಿ ೭ ಗವಿಗಳಿದ್ದು, ಆ ಗವಿಗಳಲ್ಲಿ ೭ ಹೊಂಡಗಳಿವೆ. ಆ ಎಲ್ಲ ಹೊಂಡಗಳ ತುಂಬ ನೀರು ೧೨ ತಿಂಗಳುಗಳ ಕಾಲ ತುಂಬಿರುತ್ತದೆ. ಮೊದಲ ಹೊಂಡ ಹೊರತು ಪಡಿಸಿ ಉಳಿದ ೬ ಹೊಂಡಗಳನ್ನು ಒಳಹೊಕ್ಕು ನೋಡಲು ಸಾಧ್ಯವಿಲ್ಲ. ಕಳಕೇಶ ಚಿಲಝರಿ ಅವರು ಅಭಿಪ್ರಾಯ ಪಡುವಂತೆ, ದೇವಸ್ಥಾನದ ಕೆಳಗಿಳಿದು ಬಂದರೆ ೫ ಹೊಂಡಗಳು ಕಾಣಸಿಗುತ್ತವೆ. ಈ ೫ ಹೊಂಡಗಳು ವರ್ಷದ ೧೨ ತಿಂಗಳುಗಳ ಕಾಲ ತುಂಬಿ ಹರಿಯುವ ಹೊಂಡಗಳು.

ಸಾಮಾನ್ಯವಾಗಿ ಗ್ರಾಮ ಎಂದರೆ ಸಾಕು. ಅಲ್ಲಿನ ನೀರಿನ ಬವಣೆಯನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಾಲಕಾಲೇಶ್ವರ ಗ್ರಾಮ ಬರ ಕಾಣದ ಗ್ರಾಮ. ಇಲ್ಲಿ ಗಂಗಾಧರ ಹಳ್ಳ ಮತ್ತು ಕಣಿವೆ ಹಳ್ಳಗಳು ಮೈದುಂಬಿ ಹರಿಯುತ್ತವೆ. ಹಾಗೆಯೇ ಈ ೫ ಹೊಂಡಗಳು ಇರುವುದರಿಂದ ಒಂದು ಹೊಂಡ ದೇವರ ಪೂಜೆಗೆ ಮೀಸಲಿದ್ದರೆ, ೨ನೇ ಹೊಂಡದ ನೀರು ಕುಡಿಯಲು, ೩ನೇ ಹೊಂಡದ ನೀರು ಸ್ನಾನ ಮಾಡಲು, ೪ನೇ ಹೊಂಡದ ನೀರು ಬಟ್ಟೆ ತೊಳೆಯಲು ಹೀಗೆ ಪ್ರತ್ಯೇಕವಾಗಿ ಭಕ್ತಾದಿಗಳು ನೀರನ್ನು ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಬೆಟ್ಟದಿಂದ ಧುಮುಕುವ ೨೦ಕ್ಕೂ ಹೆಚ್ಚು ನಯನ ಮನೋಹರ ಜಲಪಾತಗಳನ್ನು ನೋಡಿ ಆನಂದಿಸಬಹುದು.ಗಜೇಂದ್ರಗಡದ ಎಸ್.ಎಂ.ಭೂಮರೆಡ್ಡಿ ಕಾಲೇಜಿನಲ್ಲಿ ನಾವೆಲ್ಲ ಪದವಿ ವಿದ್ಯಾರ್ಥಿಗಳಾಗಿದ್ದ ಮೇಲಿಂದ ಮೇಲೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೆವು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ ಸಾಕಷ್ಟು ಬಾರಿ ಈ ಎಲ್ಲ ಹೊಂಡಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಇತ್ತೀಚೆಗೆ ನಾನು ಭೇಟಿ ನೀಡಿದ್ದಾಗ ಹೊಂಡಗಳೆಲ್ಲ ಕಳೆಗುಂದಿ ಕೊಚ್ಚೆಯ ಗುಂಡಿಗಳಂತಾಗಿದ್ದವು. ಈ ಬಾರಿ ಸೂಟಿಯಲ್ಲಿ ಊರಿಗೆ ಹೋದಾಗ ಸಮಾನಮನಸ್ಕ ಗೆಳೆಯರೆಲ್ಲ ಜೊತೆಗೂಡಿ ಮತ್ತೆ ಅವುಗಳನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದ್ದೇವೆ.

ನೀವು ಈ ಕ್ಶೇತ್ರಕ್ಕೆ ಭೇಟಿ ನೀಡಬೇಕೆ? ಹುಬ್ಬಳ್ಳಿಯಿಂದ ೫೨ ಕಿ.ಮೀ ದೂರದಲ್ಲಿದೆ ಗದಗ. ಅಲ್ಲಿಂದ ಗಜೇಂದ್ರಗಡ ೫೬ ಕಿ.ಮೀ. ಇಲ್ಲಿಂದ ಕೇವಲ ೪ ಕಿ.ಮೀ ದೂರದಲ್ಲಿದೆ ಶ್ರೀ. ಕಾಲಕಾಲೇಶ್ವರ ದೇವಸ್ಥಾನ. ಇಲ್ಲಿಗೆ ಬಸ್, ಟ್ಯಾಕ್ಸಿ ಮತ್ತು ಆಟೊ, ಟಾಂಗಾಗಳ ಮೂಲಕ ತೆರಳಬಹುದು. ಇಲ್ಲಿ ಯಾವುದೇ ಹೊಟೆಲ್ ಅಥವಾ ಪ್ರವಾಸಿ ಮಂದಿರಗಳು ಇಲ್ಲದ ಕಾರಣ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕು.

Tuesday, May 26, 2009

ನೀರು ಅಮೂಲ್ಯವಾದುದು ಮಿತವಾಗಿ ಬಳಸೋಣ

ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಭೂಮಿಗೆ ಜ್ವರ ಬರುವ ಸ್ಠಿತಿಯಲ್ಲಿದೆ! ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ. ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ.

ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.

ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ. ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.
ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.

ತಿಪ್ಪಣ್ಣ ಅವಧೂತ

ಕ್ಯಾಂಪಸ್ ವಿಶೇಷ

ವಿದ್ಯಾಭಾರತಿ ಪ್ರತಿಷ್ಠಾನದ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್ ಆಂಡ್ ರಿಸರ್ಚ (ಐ.ಎಂ.ಸಿ.ಆರ್)
ಪತ್ರಿಕೋದ್ಯಮ ಮಹಾವಿದ್ಯಾಲಯವು ೨೦೦೯-೨೦೧೦ ನೇ ಸಾಲಿನ ಪರಿಚಯ ಪತ್ರ ತಯಾರಿಸಲು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಾಚಾರ್ಯೆರೊಂದಿಗೆ ಛಾಯಾಚಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

೨೦೦೪ ರಿಂದ ಐ.ಎಮ್.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯವು ಭಾವಿಪತ್ರಕರ್ತರನ್ನು ತರಬೇತಿಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಮಹಾವಿದ್ಯಾಲಯ ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ೨೦೦೭ ನೇ ಸಾಲಿನ ’ಚಾಣಕ್ಯ’ ಪ್ರಸಸ್ತಿ ಪಡೆಯುವಲ್ಲಿ ಯಸಸ್ವಿಯಾಗಿದೆ.
ಪ್ರಾಚಾರ್ಯೆ ಡಾ.ನಯನಾ ಗಂಗಾಧರ ಅವರು ವಿಭಾಗಕ್ಕೆ ಬೆನ್ನೆಲುಬಾಗಿದ್ದಾರೆ. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರುಗಳಾದ ವಿನಯಚಂದ್ರ ಮಹೀಂದ್ರಕರ್ ಹಾಗೂ ವಿದ್ಯಾಧಿಕಾರಿ ಪ್ರೊ. ಪಿ.ಎನ್.ಖಟಾವಕರ. ಅವರ ಪ್ರೋತ್ಸಾಹ ಮತ್ತು ಸಹಕಾರದ ಸಮ್ಮಿಲನವು ಪತ್ರಿಕೋದ್ಯಮ ವಿಭಾಗದ ಬೆಳವಣಿಗೆಗೆ ಪೂರಕವಾಗಿದೆ.

ಸಮ್ಯಕ್ ದರ್ಶನ

ಕುಮಾರಿ ಚೇತನಾ ಜೋಶಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ. ಇವರು ಐಬಿಎಂಆರ್ ನಲ್ಲಿ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾರೆ.

೨೦೦೮-೨೦೦೯ ನೇ ಸಾಲಿನ ಮಹಾವಿದ್ಯಾಲಯ ವಿಭಾಗದಲ್ಲಿ ನಡೆದ ಜಮಖಾನದಲ್ಲಿ ಕೊಲ್ಯಾಜ್ ಹಾಗೂ ದೇಶಭಕ್ತಿ ಗೀತೆ ಸ್ಪರ್ದೆಯಲ್ಲಿ ಬಹುಮಾನ ಪಡೆದ ಈಕೆ,ಕಲಿಯಬೇಕೆಂಬ ಆಸಕ್ತಿ, ಸತತ ಪರಿಸ್ರಮವಿದ್ದರೆ ಕಲೆ ಒಲಿಯುತ್ತದೆ ಎನ್ನುತ್ತಾರೆ. ಈ ಬಗ್ಗೆ ಅವರನ್ನು ಮಾತನಾಡಿಸಿದಾಗ.........

ಸಂತೋಷ - ಮಹಾವಿದ್ಯಾಲಯದಲ್ಲಿ ಕೊಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ನಿಮ್ಮ ಅನುಭವ ಹೇಗಿತ್ತು?
ಚೇತನಾ - ಕೊಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕಳೆದ ಮೂರು ವರ್ಷಗಳಿಂದ ಕೊಲ್ಯಾಜ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೆನೆ.
ಸಂತೋಷ - ನಿಮ್ಮ ನೆಚ್ಚಿನ ಹವ್ಯಾಸಗಳೇನು?
ಚೇತನಾ - ಸಂಗೀತ, ಸಾಹಿತ್ಯ ಕಾದಂಬರಿಗಳನ್ನು ಓದುವದು ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಾಗಿವೆ. ಮೂರು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದ್ದೇನೆ.
ಸಂತೋಷ - ನಿಮ್ಮ ಓದಿನ ನಡುವೆ ಹವ್ಯಾಸಕ್ಕೆ ಹೇಗೆ ಪ್ರಾಮುಖ್ಯತೆ ನೀಡುತ್ತೀರಿ?
ಚೇತನಾ- ಹವ್ಯಾಸಗಳೇನಿದ್ದರೂ ಓದಿನ ನಂತರ. ವಿದ್ಯಾಭ್ಯಾಸಕ್ಕೆ ನನ್ನ ಮೊದಲ ಆಧ್ಯತೆ ನಾನು ಚೆನ್ನಾಗಿ ಓದಿ ಉನ್ನತ ಸ್ಥಾನ ಪಡೆಯಬೇಕಿದೆ.
ಸಂತೋಷ - ನಿಮ್ಮ ಭವಿಷ್ಯದ ಗುರಿಯೇನು?
ಚೇತನಾ - ಸಾಫ್ಟ್ ವೇರ್ ತಂತ್ರಾಂಶ ವಿಭಾಗದಲ್ಲಿ ಉದ್ಯೋಗ ಪಡೆಯುವದು ಹಾಗೂ ಅದರಲ್ಲಿ ಯಶಸ್ಸು ಗಳಿಸುವುದು ನನ್ನ ಆಶೆ. ಅಲ್ಲದೇ ಸಾಹಿತ್ಯ ಕೃಷಿ ಮಾಡುವುದೂ ಸಹ ನನ್ನ ಕನಸಾಗಿದೆ.


ಮೊದಲ ಮತದಾನದ ಅನಿಸಿಕೆ


ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆಗೆ ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಐಬಿಎಮ್ ಆರ್ ನ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನಿಸಿಕೆ ಹೀಗಿದೆ.
"ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ನನಗೆ ಖುಷಿ ಎನಿಸುತ್ತಿದೆ. ಏಕೆಂದರೆ ನಾಗರಿಕನೆಂದು ಪರಿಗಣಿತವಾಗಿ .ದೇಶದ ಆಡಳಿತ ವ್ಯವಸ್ಥೆಯಲ್ಲಿ ನಾನು ಭಾಗವಹಿಸುತ್ತಿದ್ದೆನೆ" ಎನ್ನುತ್ತಾರೆ ಐ.ಬಿ.ಎಂ.ಆರ್.ನಲ್ಲಿ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಮಿತ್.

’ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ನನಗೆ ಅಲ್ಪಮಟ್ಟಿಗೆ ಸಂತೋಷವೆನಿಸಿದರೂ ಈ ಬಗ್ಗೆ ಬೇಸರವೆಸಿಸುತ್ತಿದೆ. ಕಾರಣ ರಾಜಕಾರಣಿಗಳಲ್ಲಿ ಎದ್ದು ಕಾಣುವ ಭ್ರಸ್ಟತೆ. ಆದರೂ ಮತ ಚಲಾಯಿಸುವುದು ಹಾಗೂ ಸರಿಯಾದ ಅಭ್ಯರ್ಥಿಗಳನ್ನು ಆರಿಸಿ ತರುವ ಮೂಲಕ ದೇಶ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.ಜನರು ಸರಿಯಾದ ಅಭ್ಯರ್ಥಿಯನ್ನು ಆರಿಸಿ ತರುವ ಮೂಲಕ ದೇಶ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. ಜನರು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಸದೃಢ ಸರಕಾರ ಜಾರಿಗೆ ತರಲು ಸಾಧ್ಯವಿದೆ" ಎನ್ನುತ್ತಾರೆ ವಿದ್ಯಾರ್ಥಿನಿ ಅಪೂರ್ವಾ ಮಳಗಿ.

ಜಾಲ ತಾಣ


www.drishtisrishti.blogspot.com
www.imcrvision.blogspot.com
ಹುಬ್ಬಳ್ಳಿಯ ವಿದ್ಯಾಭಾರತಿ ಪ್ರತಿಷ್ಠಾನದ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಆಂಡ್ ರಿಸರ್ಚ, ಪತ್ರಿಕೋದ್ಯಮ ಮಹಾವಿದ್ಯಾಲಯದ ವತಿಯಿಂದ ಪ್ರಾರಂಭಿಸಲಾದ ಸೃಜನಶೀಲ ಬ್ಲಾಗ್ ಇದಾಗಿದೆ.ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ವೈಚಾರಿಕ ಪ್ರಜ್ಣೆಯನ್ನು ವೃದ್ಧಿಸುವುದೇ ಈ ಬ್ಲಾಗನ ಮುಖ್ಯ ಉದ್ದೇಶವಾಗಿದೆ.

ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಬರೆಯುವ ಕನ್ನಡ ಹಾಗೂ ಇಂಗ್ಲೀಷನ್ ಲೇಖನ,ನುಡಿಚಿತ್ರ ಗಳು ಈ ಬ್ಲಾಗ್ ನಲ್ಲಿ ಕಾಣಸಿಗುತ್ತವೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ವೇದಿಕೆಯಾಗಿರುವ ಈ ಬ್ಲಾಗ್ ಅನೇಕ ಉತ್ತಮಾಂಶಗಳನ್ನು ಹೊಂದಿದೆ.
ಪ್ರಪಂಚದ ಯಾವುದೇ ಮೂಲೆಯಿಂದಲಾದರೂ ಈ ಬ್ಲಾಗಿಗೆ ನೀವು ಭೇಟಿ ನೀಡಬಹುದಾಗಿದೆ. ಈಗಾಗಲೇ ೧೭೭ ಓದುಗರು ಈ ಬ್ಲಾಗಿಗೆ ಭೇಟಿ ನೀಡಿದ್ದಾರೆ.ಅಲ್ಲದೇ ಓದುಗರು ಟೀಕೆ ಟಿಪ್ಪಣೆ ಅಭಿಪ್ರಾಯಗಳನ್ನು ಕಳುಹಿಸಬಹುದಾಗಿದೆ. ವಿದ್ಯಾರ್ಥಿಗಳೇ ಬರೆಯುವ ಬರಹಗಳಾಗಿದ್ದರಿಂದ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ, ಒಮ್ಮೆ ಓದಿದ ಪ್ರತಿಕ್ರಿಯೆ ಮಿಂಚಂಚೆ ಸಮೇತ ರವಾನಿಸಿ.